ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Friday, November 8, 2013

ಶರಣೆ

ತುಂಬಾ ಸೋತಾಗೆಲ್ಲ ನಿನ್ನ ಹಂಬಲವೇಕೆ?
ನನ್ನ ಕಂಬನಿಗೆಲ್ಲ ನೀನೆ ಕಾರಣವೇಕೆ?

ಏನು ತಪ್ಪಿದೆ ಹೇಳು
ಭಾವದಲ್ಲಿ
ಎನ್ನ ಶರಣಾಗತಿಗೆ
ನೀನೇ ಇಲ್ಲಿ.

ಅರಿವು,ಗುರುವುಗಳೆಲ್ಲ
ನೀನೆ ತಾನೆ?
ಕೃಷ್ಣ ನಿನ್ನಡಿಯಲ್ಲಿ
ನಾನು ಶರಣೆ.

Monday, November 4, 2013

ಮುತ್ತು ಮತ್ತು ಕವನ.

ಮುತ್ತು ಮತ್ತು ಕವನ.

 ಜೀವಸಂಚಲನದ
ಮೈತ್ರಿಯಲ್ಲಿ ಮೊರೆಯಾಗುತ್ತಿದೆ
 ಇದೋ ಕೇಳು
ಭಾವದೊಸಗೆಯ ಈ ಪ್ರೇಮ
 ಒಲವೆಂಬುದು ಮಾತು ಮಾತಿನ
ನಡುವೆ  ಕಟ್ಟಿಕೊಟ್ಟ
ನೆನಪಿನ ಬುತ್ತಿ!

 ಮೆಲ್ಲುವ ಮನಸಿನ
ಮೆಲುಕಾಗುವ
ಕನಸಿನ ಚೆಲುವ
 ಅಂತಃಕರಣಕ್ಕೆ
ಧ್ವನಿ ಪೂರ್ಣ ಹಗಲು
ಈ ಬೆಳಕಾಗಲಿ.


 ಕಡಲು ಕರೆಯುವ
ಅಲೆಯ ಮೊರೆತವ
ಎಲ್ಲೋ ಜತನದಿ ಕಾಪಿಡು
 ಕಪ್ಪೆ ಚಿಪ್ಪಿನ ಒಳಗೆ
ಸ್ವಾತಿ ಹನಿ
 ಮುತ್ತಾಗಲು ಕಾಯ್ದಿರು..

 ಕವಿತೆ ನನ್ನೊಳಗಲ್ಲ,
 ನಾನು ಕವಿತೆಯೊಳಗೆ
 ಅರಿಯದೇ ಉಳಿದುಬಿಡಲಿ
ಮೂಡಿಬರಲಿ
ಮುತ್ತು ಮತ್ತು ಕವನ.