ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Wednesday, August 8, 2012

ಕಲ್ಲು ಮತ್ತು ಮೂರ್ತಿ


ಕಲ್ಲು ಮತ್ತು ಮೂರ್ತಿ

ರಾಧಾ " ಬೃಂದಾವನ" ದ ಬೆಳದಿಂಗಳಲ್ಲಿ ಕುಳಿತು ನಿರೀಕ್ಷೆಯಲ್ಲಿದ್ದಳು. ಮೈ ಹೆಪ್ಪುಗಟ್ಟುವ ಮಾಗಿ ಛಳಿ. ಅವಳ ದುಪ್ಪಟ್ಟಾ ಹಾರುತ್ತಿತ್ತು. ಬಿಗಿಯಾಗಿ ಹಿಡಿದಷ್ಟೂ. ಮನಸ್ಸಿನಂತೆ. ಜಾವ ಎರಡು ಕಳೆದರೂ ಪತ್ತೆಯಿಲ್ಲ. ಅಳುವಹಾಗೆನಿಸುತ್ತಿತ್ತು.ಅಳು ಬರುವ ಮುನ್ನ ಪ್ರೀತಿಯೆಂಬ ಪ್ರೀತಿ ಅವಳನ್ನು ಅಣಕಿಸುತ್ತಿತ್ತು.ನಿನಗೆ ವಿಶ್ವಾಸವಿಲ್ಲ ಅಲ್ಲವೇ? ಅನ್ನುತ್ತ. ಹಾಗೆ ನಂಬಲೂ ಅವಳಿಗೆ ಕಷ್ಟ. ಅವಳ ವಿಶ್ವಾಸವೇ ಅವಳ ಬದುಕು. ಅದೇ ಅವಳ ಬಲ. ಅದಿಲ್ಲವಾದರೆ ಅವಳಿಲ್ಲ.ಕೃಷ್ಣನ ಕೊಳಲು ರಾಧೆೆಗೋ ಗೋಪಿಕೆಯರಿಗೋ ಅವಳಿಗೂ ಅನುಮಾನವೇ. ಆದರೂ ರಾಧಾ ಮಾಧವನೆಂಬ ಅವಳ ಅಚಲ ನಂಬಿಕೆ........
ಮಾಗಿಯ ರಾತ್ರಿಗೆ ಬರುವ ನಲ್ಲನ ನಿರೀಕ್ಷೆಯ ಹೊತ್ತು ಅದೆಷ್ಟು ದಿನ ಕಳೆದಿದ್ದಳೋ....ಅಂತೂ ಬೃಂದಾವನಕ್ಕೆ ಅವನ ಆಗಮನದ ಸುದ್ದಿ ಕೇಳುತ್ತಿದ್ದಂತೆ ಇಡೀ ಬೃಂದಾವನವೇ ಸಡಗರದಿಂದ ಸಿಂಗಾರಗೊಳ್ಳೋದು ನೋಡಿ ಮನಸ್ಸು ಚುರುಕ್ಕೆಂದಿತ್ತು! ಬಂದವನೇ ಅವ ವಿಶ್ರಮಿಸದೇ ಸತ್ಯಳ ಬಳಿ ನಡೆದಿದ್ದ. ಅವಳ ಕೋಪ ಹಾರಾಟ ಜಗತ್ತಗೇ ತಿಳಿದದ್ದು. ಆದರೂ ಕೃಷ್ಣ ಅವಳ ಮುನಿಸು ತಣಿಸಲು ಸದಾ ಅವಳ ಓಲೈಸುತ್ತಿದ್ದ.ಬೃಂದಾವನದಭಕ್ತರಿಗೆ ಮೀಸಲಾದವನು ಕೃಷ್ಣ! ಅವನು ಊರೆಲ್ಲ ವಿಚಾರಿಸಿ, ಅವನಿಗಾಗಿ ಕಾಯ್ದಿಟ್ಟ ಹಾಲು, ಮೊಸರು, ಅವಲಕ್ಕಿಗಳ ರುಚಿ ನೋಡದೇ ಎಲ್ಲಿ ಬರಬಿಡುವರು?ದೂರದಲ್ಲಿ ಜೋಗಿತ್ತಿಯೊಬ್ಬಳು ಹಾಡುತ್ತಾ ಹೋಗುತ್ತಿದ್ದಳು.ಅವಳ ಬಾಯಲ್ಲೂ ಅವನೇ........ ಜಾವ ಎರಡಾದರೂ ಅವನು ಬರಲೊಲ್ಲ. ಇನ್ನು ನಿರೀಕ್ಷೆ ಸುಮ್ಮನೇ ಅಂದುಕೊಂಡಳು......ಈಗಾಗಲೇ ಸುಸ್ತಾಗಿರುತ್ತಾನೆ. ದೂರದ ಪ್ರಯಾಣ ಮಾಡಿ ಬಂದಿರುವ ಅವನು ಯಾರ ಮನೆಯಲ್ಲೋ ಪಲ್ಲಂಗ ಸೇರಿದರೆ ಆಶ್ಚರ್ಯವೇನು? ಒಂದುವೇಳೆ ಬಂದರೂ ಅವನು ಮಾತನಾಡಬಲ್ಲನೇ? ಸುಮ್ಮನೇ ನಿರೀಕ್ಷೆ ಬಿಟ್ಟುಮಲಗೋಣ ಎಂದುಕೊಂಡು ಒಳಕೋಣೆಗೆ ನಡೆದಳು...
ಸುಖದ ಸುಪ್ಪತ್ತಿಗೆ... ರೇಶಿಮೆಯ ಹಾಸು, ಎತ್ತರವಾದ ಪಲ್ಲಂಗ.......ತನ್ನನ್ನು ಅಣಕಿಸಿದಂತೆ.....ರಾಧೆ ಬೆಚ್ಚಿದಳು. ಕಿಡಕಿಯಾಚೆ ಸುಖನಿದ್ರೆಯಲಿದ್ದ ಚಂದ್ರಮನ ಕಂಡು ನಿಡುಸುಯ್ದಳು. ಧರಿಸಿದ ಆಭರಣಗಳು ಮೈ ಯೆಲ್ಲ ಚುಚ್ಚುತ್ತಿರುವಂತೆನಿಸಿ ತೆಗೆದಿಟ್ಟಳು." ಕೃಷ್ಣಾ " ಅಂದುಕೊಂಡು ಕಣ್ಣು ಮುಚ್ಚಿದಳು.
ಅವಳಿಗೇನೂ ಹೊಸದಲ್ಲ ಅದು. ದಿನ ದಿನವೂ ಇದೇ ನಿರೀಕ್ಷೆಯೇ ಅವಳ ಬದುಕಾಗಿ ಬಿಟ್ಟಿದೆ. ಹೆಸರಿಗೆ ಪಟ್ಟದ ರಾಣಿ. ಬೃಂದಾವನದ ಹೆಂಗಳಿಯರಿಗೆಮಾಡಲು ಕೆಲಸವಾದರು ಇದೆ. ಅವಳಿಗೆ ಕೆಲಸಗಳೂ ಇಲ್ಲ. ಸಾಕ್ಷಾತ್ ಕೃಷ್ಣನ ಮನದನ್ನೆ ರಾಧೆಗೆ ಏನು ಕೆಲಸ? ಸಮಯ ಮಾತ್ರ ಅವಳನ್ನುಗೋಳು ಹುಯ್ದುಕೊಳ್ಳುತ್ತದೆ.ದೇವರ ಪೂಜೆಗೆ ಕುಳಿತರೆ ಸಾಕ್ಷಾತ್ ಕೃಷ್ಣನೇ ಬರದಿರುವಾಗ ಇನ್ಯಾವ ದೇವ ಬರಬಹುದು ಅನ್ನಿಸುತ್ತದೆ.ಅದು ಕಲ್ಲುಮೂರ್ತಿಯಾಗಿ ಕಾಣುತ್ತದೆ. ಅಲ್ಲ ಅವನುಳಿದು ಅನ್ಯವೇ ಇಲ್ಲದ ರಾಧೆ ಅವನೊಳಗೇ ಲೀನವಾದ ಮೀರಾ..... ಕಲ್ಲಿನ ದೇವರೆದುರು ನಿಂತರೆ !
ಪ್ರೀತಿ ಎಂಥ ಹಂಬಲ! ಅದರೊಳಗೆ ಅದೆಷ್ಟು ಸಹನೆ! ರಾಧೆಯ ಪ್ರೀತಿ ಕೃಷ್ಣನಿಗೆ ಅರ್ಥವಾದೀತಾ? ರಾಕ್ಷಸರುಗಳ ಕೊಲ್ಲುವಾಗ,ರಾಜ್ಯಗಳ ಗೆಲ್ಲುವಾಗ, ಧರ್ಮಯುದ್ಧ ಮಾಡುವಾಗ, ಜಗದ ಕಷ್ಟ ಪರಿಹರಿಸುವಾಗ ಯಾವತ್ತೂ ಕೃಷ್ಣ ಬರೀ ಕರ್ಮಯೋಗಿಯಾಗಿ ಕಾಣಿಸಿಕೊಂಡ.ಪ್ರೇಮವನ್ನು ಸಾರುವಾಗಲೂ ಅವನು ಗೋಪಿಕೆಯರನ್ನೇ ಬಳಸಿಕೊಂಡ. ಯಮುನೆಯ ತಟದಲ್ಲಿ ಕೃಷ್ಣನ ಕೊಳಲಿಗೆ ಮರುಳಾಗಿದ್ದು ರಾಧೆ ಮಾತ್ರಅಲ್ಲ!. ಹದಿನಾರು ಸಾವಿರ ಹೆಂಡತಿಯರ ಮನದಲ್ಲಿ ಮನೆಮಾಡಿ ಬಂದ ಕೃಷ್ಣನ ರಾಧೆ ಒಂದಿನಿತೂ ಮುನಿಸಿಲ್ಲದೇ ಲೋಕದ ಯಾವ ಭಯವಿಲ್ಲದೇಒಂದೇ ಪ್ರಶ್ನೆ ಕೇಳದೇ ಬರಮಾಡಿಕೊಳ್ಳುತ್ತಾಳೆ. ರಾಧೆ ಎಂತಹ ಅದ್ಭುತ ವ್ಯಕ್ತಿ! ನಮ್ಮೊಳಗೆ ಅವಳ ಸಾಮಾನ್ಯ ಬದುಕಿನ ನೋಟಗಳು ಕಾಣುವುದಿಲ್ಲಯಾಕೆ? ವನವಾಸ ಅನುಭವಿಸಿ ಬಂದ ಸೀತೆಗೆ ರಾಮ ಅಗ್ನಿಪರೀಕ್ಷೆ ನಡೆಸಿದ! ಜನರ ಮಾತಿಗೆ ಹೆದರಿ! ಆದರೆ ರಾಧೆ ಯಾವತ್ತೂ ಕೃಷ್ಣನ ಪರೀಕ್ಷಿಸಲೇ ಇಲ್ಲ.ಪಾರಿಜಾತವಾಗಲೀ, ದೂರ್ವೆಯಾಗಲೀ ಅವಳ ಪ್ರೀತಿಯ ಮುಂದೆ ಎಲ್ಲವೂ ತೃಣವೇ. ಎಂಥಹ ನಿರ್ಮಲ ಆರಾಧನೆ ಅದು? ಭಕ್ತಿಗೆ ಪ್ರೀತಿಗೆ ರಾಧೆ ಒಬ್ಬಳೇ ಸಾಕು. ಅವಳ ಮನದಲ್ಲಿ ಎಂಥಹ ನೋವಿದ್ದರೂ ಅವಳು ಅದನ್ನೆಲ್ಲ ಮೀರಿ ನಿಲ್ಲುವ ಮೂರ್ತಿಯಾಗಿಬಿಡುತ್ತಾಳೆ.ಕೃಷ್ಣ ಕಲ್ಲಾಗಿಬಿಡುತ್ತಾನೆ.! ಕೃಷ್ಣ ರಾಧೆಯ ಪ್ರೇಮ ನಮ್ಮಂತ ಪಾಮರರಿಗೆ ನಿಲುಕದ್ದಿರಬಹುದು. ಆದರೆ. ಲೋಕದ ಕಣ್ಣಿಗೆ ರಾಧೆಯೂ ಕೂಡ ಎಲ್ಲರ ಹಾಗೆಹೆಣ್ಣು

ಪತಿತೆಯಲ್ಲ!. ಪಾವನೆ.!!



ಪತಿತೆಯಲ್ಲ!. ಪಾವನೆ.!!
ಪ್ರಶಾಂತ ನದೀ ತೀರ.......... ಕಾಲಡಿಗೆ ಹರಿಯುವ ಗಂಗೆ..... ಆಕಾಶಕ್ಕೆ ಏಣಿ ಇಟ್ಟ ಮೋಡಗಳ ಸಾಲು........ಪೃಕೃತಿ ಮೈ ಮರೆತು ನಿಂತ ಹದಿನಾರರ ಬೆಡಗಿ.... ಹಸಿ ಹಸೀ ಮೈ ಹೊತ್ತ ಕನಸು ಕಂಗಳ ಚೆಲುವೆ......ಆ ದೇಗುಲದ ನಾದ ಹರಿಯುತ್ತಿದೆ ಎದೆಯೊಳಗೆ ಅದೇ ಗಂಗೆಯಂತೆ.... ಒಡಲೆಲ್ಲ ತಂಪಾಗಿಸಿಕೊಂಡು,ಕಂಗಳಂಚಲ್ಲಿ ಭಾವಗಳ ಮಳೆ ಸುರಿಸುತ್ತಾ ಪ್ರೇಮದ ಗುಂಗಿನಲ್ಲಿ ಮೈ ಮರೆತ ಕ್ಷಣಗಳು.... ಝಣ ಝಣಿರೆನ್ನುವ ಕಿರುಗೆಜ್ಜೆ ನಾದ.... ಅವಳ ನಡಿಗೆಯೇ ಆನಂದಭೈರವಿಯಂತೆ ತೋರುತ್ತಿದೆ......... ಮನಸು ಮಂದಾನಿಲ.......... ತುಳಸಿಯೆದುರು ಕೈ ಮುಗಿದು ನಿಂತ ಮುಂಜಾವಿನ ಸೊಬಗು! ಹೃದಯ ಹಾಡುವ ಕುಹೂ...ಕುಹೂ........ ಕೇಳಿ ಕೋಗಿಲೆ ಹಾಡೋದು ಮರೆತ ಹಾಗಿದೆ..ಇಂಚರದ ಸೊಂಪಲ್ಲಿ ಮಾವಿನೆಲೆ ಚಿಗುರು! ಅದೇ ಅದೇ ಪ್ರೇಮದ ಮಧುರ ಮಧುರ ಸಂಚಾರ...............ರಾಧೆಯೆಂಬ ಪ್ರೇಮದರಸಿ ರಾಧೆಯಲ್ಲ........ ರುಕ್ಮಿಣಿಯಂತೆ ಪಟ್ಟದರಸಿ ಬಯಸಿದವಳಲ್ಲ. ನಾನೊಬ್ಬ ಮುಗ್ದೆ. ನನ್ನಿರವು ನಿನಗೇನಲ್ಲ ಗೊತ್ತು ಕೃಷ್ಣಾ ಹಾಗಂತ ನೀನಿಲ್ಲದೇ ನಾನಿಲ್ಲ....... ನಿನ್ನ ಪ್ರೇಮದ ಬಯಲಲಿ ತಂಗಾಳಿಯಾಗಿ ಬರುವ ಗಾಳಿ ನಾನು. ನಿನ್ನ ಭಕ್ತಿ ರಸದಲಿ ಗಂಧವಾಗೋ ಹೂ ನಾನು. ನಾನು ಕೃಷ್ಣಾ ನಿನ್ನದೇ ಮೀರೆ. ಭೂಮಿಯ ಬದುಕಿನ ಮೋಹಗಳೆಲ್ಲ ತೊರೆಯದ ಬಲು ಭಾರ ನಾನು. ನನ್ನಿರವನ್ನೇ ನಿನಗಪರ್ಿಸಿಕೊಳ್ಳುವ ಆನಂದಿ ನಾನು. ನಿನ್ನಿಂದ ನಿರೀಕ್ಷೆಯೇನಿಲ್ಲ ಕೃಷ್ಣಾ ನಾನೇ ನೀನಾಗುವ ಹಂಬಲ ನನಗೆ! ಅಲ್ಲ. ನೀನೆಲ್ಲಿ ನಾನೆಲ್ಲಿ! ಗೊತ್ತೊ ನನಗೆ.! ನಿನ್ನಡಿಯ ಪಾದದ ಧೂಳಾಗೋ ಆಸೆ. ನೀ ನಡೆವ ಹಾದಿಯಲಿ ಹೂವಾಗೋ ಆಸೆ.... ನಿನ್ನ ಮುರಳಿಗೆ ಸಿಗುವ ಬಿದಿರಾಗೋ ಆಸೆ..... ನೀನುಡುವ ಪೀತಾಂಬರದ ನೂಲಾಗೋ ಆಸೆ..... ಎಂಥಹಆಸೆಗಳ ಮೂಟೆ ನಾನು! ಹೇಗೆ ತೊರೆಯಲಿ ನಿನ್ನಾಸೆ? ಕೃಷ್ಣ......... ಕೃಷ್ಣ ನಿಲ್ಲದ ಕಣವಿಲ್ಲ. ಕೃಷ್ಣನಿಲ್ಲದ ಕ್ಷಣವಿಲ್ಲ. ನನ್ನ ತಂಬೂರಿಯ ದನಿಯಾಗೋ ಕೃಷ್ಣನನ್ನೆದೆಯಲಿ ಮಿಡಿವ ಮನವಾಗೋ ಕೃಷ್ಣ. ನನ್ನೊಡಲ ತುಂಬುವ ಖನಿಯಾಗೋ ಕೃಷ್ಣ.ಮೀರೆಯ ಮಾಧವ ಮತ್ಯಾರೋ ಅಲ್ಲ. ಅವ ಸಾಕ್ಷಾತ್ ಪ್ರೇಮಸ್ವರೂಪಿ. ರಾಧೆಯ ಮೋಹನ ಮುರಳಿ ಅವನು. ಗೋಪಿಕೆಯರ ತನುಮನದಗೋಪಾಲ ಅವನು. ಹದಿನಾರು ಸಾವಿರ ಕನ್ಯೆಯರ ವರಿಸಿದವನವನು. ರುಕ್ಮಿಣಿಯ ಸಿಂಧೂರ, ಸತ್ಯಭಾಮೆಗೆ ವರ. ಎಲ್ಲೆಲ್ಲೂ ಕೃಷ್ಣಾ ನಿನ್ನ ಪ್ರೇಮದ ಜಲ....ನಂದಗೋಕುಲದಲ್ಲಿ ಮನೆಮನೆಗೆ ಕಂದ......ಮಥುರೆಯ ಮೈದಾನದಿ ಮನಮನದ ನಾದ... ಯಮುನಾ ತೀರದಲಿ ಗೋಪಿಕೆಯರ ಮನಕದ್ದದ್ವಾರಕೆಗೆ ಮರಳಿದರೆ ಅವ ಸಾಕ್ಷಾತ್ ರಾಜನಾಗಿದ್ದ. ಆದರೂ ಮೀರೆಗೆ ಅವನಲ್ಲದೇ ಇನ್ಯಾರೂ ಕಾಣಲಿಲ್ಲ............ ಯಾಕೋ ಮೀರೆಗೆ ಮಾಧವನ ಹುಚ್ಚು!ಮಾಧವನ ಪ್ರೇಮವೇ ಹಾಗೆ ಅದು ಬರೀ ಹುಚ್ಚಲ್ಲ. ಪ್ರೇಮದ ಅತೀ ಹುಚ್ಚು. ಒಮ್ಮೆ ಅವನಿಗಾಗಿ ಪರಿತಪಿಸಿ ಹೊರಟವರ್ಯಾರೂ ಹಿಂದೆ ತಿರುಗಿಲ್ಲ. ದಾಸರೂ ಭಕ್ತರು ಎಲ್ಲರೂ ಅವನ ಪ್ರೇಮದ ದಾಹಿಗಳೇ.........


ಗಂಡ ಮಕ್ಕಳೆಲ್ಲ ತುಂಬಿದ ಸಂಸಾರ ಅವಳದು. ಅವಳು ಹೊರಟಿದ್ದು ಮಾಧವನ ಹಿಂದೆ. ತೊರೆದದ್ದು ಬಂಧನವ. ಹಿಡಿದದ್ದುಬಂಧವ.....ಭಾವದಲಿ ಪೂಜಿಸುವ ಅವನೇ ಪತಿ......ಬಂಧಗಳ ಗೆಲ್ಲಿಸುವ ಅವನೇ ನಿಧಿ..... ಕೃಷ್ಣಾ. ನಿನ್ನ ಪ್ರೇಮದ ಪರಿಯ ಬಣ್ಣಿಸಲಿ ಹೇಗೆ? ನನ್ನ ನಾಡಿಗಳೆಲ್ಲ ರಸರಸದ ಜೀವ.... ಜಗದೆಲ್ಲ ಆನಂದ ಈ ಒಡಲಿಗೇ ಸುರಿದ ನಿನ್ನೊಲವು ಕೃಷ್ಣಾ..........ನೀನಿಲ್ಲದೇ ಜಗವಿಲ್ಲ ಆನಂದವಿಲ್ಲ ನಾನಿಲ್ಲ ಕೃಷ್ಣಾ. ತಂಬೂರಿ ಮೀಟುತ್ತ ಹಾಡುತ್ತ ನಡೆದವಳು ಕೃಷ್ಣನರೆಸುತ್ತಾ ಜಗವೆಲ್ಲ ಸುತ್ತಿ ಅವನಲ್ಲೇ ಐಕ್ಯಗೊಂಡವಳು ಮೀರೆ. ಪತಿತೆಯಲ್ಲ!. ಪಾವನೆ.